ಆಲತ್ತೂರು ಸಹೋದರರು ಒಂದೇ ತಾಯಿಯ ಮಕ್ಕಳಾಗಿ ಸಹೋದರರು ಎನ್ನಿಸಿಕೊಂಡಿರಲಿಲ್ಲ. ಸಂಗೀತ ತಾಯಿ ಸರಸ್ವತಿಯ ಮಕ್ಕಳಾಗಿ, ಒಬ್ಬರೇ ಗುರುವಿನ ಶಿಷ್ಯರಾಗಿ 'ಸಹೋದರರು' ಎನಿಸಿಕೊಂಡವರು. ಇಬ್ಬರಲ್ಲಿ ಒಬ್ಬರು ಸುಬ್ಬು (ಶಿವಸುಬ್ರಹ್ಮಣ್ಯ ಐಯ್ಯರ್), ಮತ್ತೊಬ್ಬರು ಶೀನು(ಶ್ರೀನಿವಾಸ ಐಯ್ಯರ್). ಆಲತ್ತೂರು ಸಹೋದರರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ೩೦-೪೦ ವರ್ಷಗಳ ಕಾಲ ವಿರಾಜಿಸಿದ ಸಹೋದರರು. ಇಬ್ಬರು ಒಂದೇ ಮರದ ಎರಡು ಶಾಖೆಗಳಂತೆ ಇದ್ದರು. ಶಿವಸುಬ್ರಹ್ಮಣ್ಯ ಐಯ್ಯರು, ಶ್ರೀನಿವಾಸ ಐಯ್ಯರನ್ನು ಅಗಲಿ, ಪುನಃ ಬಂದು ಸೇರಲಾಗದಂತಹ ಸ್ಥಳಕ್ಕೆ ಹೋಗಿಬಿಟ್ಟರು! ಇದರಿಂದ ಶ್ರೀನಿವಾಸ ಐಯ್ಯರು ಮಾತ್ರವಲ್ಲ ಸಂಗೀತ ಪ್ರಪಂಚವೇ ಬಡವಾಗಿದೆ. == ಸಂಗೀತ ಕಲೆ == ರಾಗಾಲಾಪನೆ, ಕೀರ್ತನೆ, ನಿರವಲ್, ಸ್ವರಪ್ರಸ್ತಾರ, ತಾನ-ಪಲ್ಲವಿ ಹಾಕುವುದು ಮೊದಲಾದವು ಸಂಗೀತದ ಪ್ರಮುಖ ಅಂಶಗಳು. ಇವುಗಳಲ್ಲಿ ಯಾವ ಒಂದು ಕರಗತ ವಾಗದಿದ್ದರೂ ಪರಿಣತ ಎನಿಸಿಕೊಳ್ಳಲಾಗದು. ಇವುಗಳ ಸ್ವಸ್ವರೂಪ ಕೆಡದಂತೆ, ಸಂಪ್ರದಾಯಕ್ಕೆ ವಿರೋಧವಾಗದಂತೆ, ಜನರಂಜನೆಯೂ ಆಗುವಂತೆ, ಭಾವಪರವಶರಾಗಿ, ಕೇಳುವವರನ್ನೊ ಪರವಶರಾಗುವಂತೆ ಮಾಡುವ ಕೆಲವೇ ಮಂದಿಯಲ್ಲಿ ಆಲತ್ತೂರು ಸಹೋದರರು ಪ್ರಮುಖರು. == ಹುಟ್ಟು ಬೆಳವಣಿಗೆ == ಈ ಇಬ್ಬರಲ್ಲಿ ಒಬ್ಬರಾದ ಸುಬ್ಬು ೧೯೧೬ ರಲ್ಲಿ ತಿರುಚರಪಳ್ಳಿಯ ಆಲತ್ತೂರು ಎಂಬ ಗ್ರಾಮದಲ್ಲಿ ಹುಟ್ಟಿದರು. ತಂದೆ ವೆಂಕಟೇಶ ಐಯ್ಯರು ಮತ್ತು ತಾಯಿ ಲಕ್ಷ್ಮೀ ಅಮ್ಮೊಳ್ ಅವರಿಗೆ ಎರಡನೇ ಮಗ. ವೆಂಕಟೇಶ ಐಯ್ಯರು ಒಳ್ಳೆ ಸಂಗೀತ ವಿದ್ವಾಂಸರು. ಶೈಶವದಿಂದಲೇ ಸಂಗಿತಕ್ಕೆ ಮಾರು ಹೋಗಿದ್ದ ಸುಬ್ಬು ಪ್ರಾಥಮಿಕ ಶಾಲೆಯ ಮೂರನೇ ತರಗತಿಗೇ ಶರಣು ಹೊಡೆದರು. ೧೯೨೩ ರಲ್ಲಿ ಒಂದು ಸ್ವಾರಸ್ಯ ಘಟನೆ ನಡೆಯಿತು. ಶಂಕರ ಶೌತ್ರಿ ಎಂಬುವರು ೬-೭ ವರ್ಷದ ಒಬ್ಬ ಹುಡುಗನನ್ನು ಕರೆದುಕೊಂಡು ವೆಂಕಟೇಶಯ್ಯರ ಮನೆಗೆ ಬಂದರು. ಸ್ವಾಮಿ ! ನಿಮ್ಮ ಮಡಲಿಗೆ ಈ ನನ್ನ ಶೀನುವನ್ನು ಹಾಕುತ್ತೇನೆ, ಕಾಪಾಡಬೇಕು ಎಂದರು. ವೆಂಕಟೇಶ ಐಯ್ಯರ ಮನಸ್ಸು ಕರಗಿತು. ಅಂದೇ ತಮ್ಮ ಮಗ ಸುಬ್ಬುವಿನ ಜೊತೆ ಕೊರಿಸಿ ಸಂಗೀತ ಪಾಠ ನಡೆಸಿಬಿಟ್ಟರು. ಅಂದಿನಿಂದ ಇವರಿಬ್ಬರು ಆಲತ್ತೂರು ಸಹೋದರರಾದರು. == ಆಲತ್ತೂರು ಸಹೋದರ ವಿಶೇಷತೆ == ಆಲತ್ತೂರು ಸಹೋದರರಲ್ಲಿದ್ದ ಅನೇಕ ವಿಶಿಷ್ಟ ಗುಣಗಳಲ್ಲಿ ಒಂದು, ಪಕ್ಕವಾದ್ಯದವರನ್ನು ಫ್ರೊತ್ಸಾಹಿಸುವುದು. ಪೂರ್ಣ ಪಾಂಡಿತ್ಯ, ಶ್ರದ್ಧಾಭಕ್ತಿ, ಗುರು ಹಿರಿಯರಲ್ಲಿ ಭಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ವಿನಯ, ಇವುಗಳು ಆಲತ್ತೂರು ಸಹೋದರರಲ್ಲಿ ಮೈವೆತ್ತ ಗುಣಗಳಾಗಿದ್ದವು. ಅವರನ್ನು ಕೀರ್ತಿಯ ಶಿಖರಕ್ಕೆ ಒಯ್ದ ಗುಣಗಳೊ ಇವೇ. ಆಲತ್ತೋರು ಸುಬ್ಬಯ್ಯರು ತ್ಯಾಗರಾಜ ಶಿಷ್ಯ ಪರಂಪರೆಯಲ್ಲಿ ನಾಲ್ಕನೆಯವರು. ಅಂದರೆ ತ್ಯಾಗರಾಜರ ಶಿಷ್ಯರು ಮಾನಾಂಬು ಚಾವಡಿ ವೆಂಕಟಸುಬ್ಬಯ್ಯರು, ಅವರ ಶಿಷ್ಯರು. ಪಿಟೀಲು ವಿದ್ವಾನ್ ತಿರುವೈಯಾರ್ ಕೃಷ್ಣಯ್ಯರ್. ಕೃಷ್ಣಯ್ಯರ್ ಶಿಷ್ಯರು ಆಲತ್ತೋರು ವೆಣ್ಕಟೇಶ ಐಯ್ಯರ್ ಅವರ ಮಗನೇ ಸುಬ್ಬಯ್ಯರು. == ಕೊನೆಯ ದಿನಗಳು == ೧೯೭೬ ರಲ್ಲಿ ಇವರು ನಮ್ಮನ್ನಗಲಿದರು. ಇವರು ಹೋದಾಗ ಇನೋಬ್ಬ ಸಹೋದರ ಶ್ರೀನಿವಾಸನ್ ನನ್ನ ಮೈಯ ಅರ್ಧ ಭಾಗವೇ ಹೋಯಿತು ಎಂದು ಮಮ್ಮಲ ಮರುಗಿದರು. ಆ ಅಪೂರ್ವ ಸೋದರರ ಸಂಗೀತ ಪರಂಪರೆಯ ನೆನಪನ್ನು ಮರೆಯದಂತೆ ಅದೇ ಧಾಟಿಯಲ್ಲಿ ಶ್ರೀನಿವಾಸ ಐಯ್ಯರ್ ಹಾಡುವವರು. ಆದರೂ ವೇದಿಕೆ ಸುಬ್ಬು ಇಲ್ಲದೆ ಬಿಕೋ ಎಂದಿರುತಿತ್ತು . == ಗೌರವ ಪ್ರಶಸ್ತಿ == ೧೯೬೫-೧೯೬೬ ರಲ್ಲಿ ಶಿವಸುಬ್ರಹ್ಮಣ್ಯ ಐಯ್ಯರ್ ಹಾಗೂ ಶ್ರೀನಿವಾಸ ಐಯ್ಯರ್ ಇಬ್ಬರಿಗೂ ಕ್ರಮಾವಾಗಿ ಮದರಾಸಿನ ಸಂಗೀತ ಅಕಾಡೆಮಿಯವರು 'ಸಂಗೀತ ಕಳಾನಿಧಿ' ಎಂಬ ಬಿರುದು ಇಟ್ಟು ಗೌರವಿಸಿತು. ಸಂಗೀತ ಪ್ರಪಂಚದಲ್ಲಿ ಇವರ ಹೆಸರು ಆಚಂದ್ರಾರ್ಕಾವಾಗಿ ಇರುವುದರಲ್ಲಿ ಸಂಶಯವೇ ಇಲ್ಲ.